ಕಲೆಯ ಆಸ್ವಾದನೆಗೆ ಮುಕ್ತ, ಮುಗ್ಧ ಮನಸ್ಸು ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ
ಲೇಖಕರು : ವಿಜಯ ಕರ್ನಾಟಕ
ಭಾನುವಾರ, ನವ೦ಬರ್ 15 , 2015
|
ನವ೦ಬರ್ 15, 2015
|
ಕಲೆಯ ಆಸ್ವಾದನೆಗೆ ಮುಕ್ತ, ಮುಗ್ಧ ಮನಸ್ಸು ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ
ಸುಳ್ಯ :
ಕಲೆ, ಕಲಾವಿದ ಮತ್ತು ಕಲಾ ಪ್ರೇಕ್ಷಕ ವರ್ಗವಿದ್ದರೆ ಮಾತ್ರ ಕಲೆಗೆ ಜೀವ. ಕಲೆ ಮತ್ತು ಕಲಾವಿದನ ಬೆಳವಣಿಗೆಗೆ ಕಲಾ ಪ್ರೇಕ್ಷಕ ಅಗತ್ಯ. ಕಲೆಯ ಆಸ್ವಾದನೆಗೆ ಮುಕ್ತ ಮತ್ತು ಮುಗ್ಧ ಮನಸ್ಸುಗಳ ಪ್ರೇಕ್ಷಕ ವರ್ಗ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಸಂಪಾಜೆಯಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಶನಿವಾರ ನಡೆದ ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾ ಪ್ರೇಕ್ಷಕ ವಿಮರ್ಶೆ ಮಾಡುವಷ್ಟು ಶಕ್ತನಾಗಿದ್ದು ಇದರಿಂದ ಯಕ್ಷಗಾನದಲ್ಲಿ ಪರಿವರ್ತನೆಯ ಯುಗ ಆರಂಭಗೊಂಡಿದೆ. ಕಲಾ ಪ್ರೇಕ್ಷಕರೊಂದಿಗೆ ಕಲೆ ಕೂಡ ಮುಖ್ಯ. ಕಲೆ ಮತ್ತು ಕಲಾವಿದರ ಮೂಲಕ ಪ್ರೇಕ್ಷಕರು ಆನಂದಿಸುವ ಮೂಲಕ ಕಲೆ ಮತ್ತು ಕಲಾವಿದ ಬೆಳೆಯಲು ಸಾಧ್ಯ. ಕಲೆಯ ಪ್ರಕಾರದಲ್ಲಿ ಈ ಮೂರರ ಸಂಯೋಜನೆ ಅಗತ್ಯ. ಯಕ್ಷಗಾನ ಅಳಿವಿನಂಚಿನಲ್ಲಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದ ಸಂದರ್ಭ ಯಕ್ಷಗಾನದಲ್ಲಿ ಬದಲಾವಣೆ ಮಾಡಲು ಆರಂಭವಾಯಿತು. ಆದರೆ ಇಂದಿಗೂ ಮೂಲ ಯಕ್ಷಗಾನದ ಸ್ವರೂಪ ಉಳಿದುಕೊಂಡಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನದಲ್ಲಿ ಅಭಿನಯ, ನೃತ್ಯ, ಸಂಹವನ, ಸಂಗೀತಗಳು ಮೇಲೈಸಿದ ಪರಿಪೂರ್ಣ ಕಲೆ ಯಕ್ಷಗಾನ. ಭಾರತದಲ್ಲಿ ಇಂತಹ ಕಲೆ ಎಲ್ಲಿಯೂ ಆಸ್ವಾದನೆಗೆ ಸಿಗುವುದಿಲ್ಲ. ಯಕ್ಷಗಾನ ಧಾರ್ಮಿಕ ಮತ್ತು ನೈತಿಕ ಸಂದೇಶಗಳನ್ನು ನೀಡುತ್ತಿದೆ. ಯಕ್ಷಗಾನ ಕಲೆಯ ಉಳಿವಿಗೆ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು.
ಸುಬ್ರಹ್ಮಣ್ಯ ನರಸಿಂಹ ಮಠದ ಸುಬ್ರಹ್ಮಣ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೈವಿಕ ಪ್ರಜ್ಞೆಯ ಪ್ರತಿರೂಪವಾಗಿ ಇಂದು ಯಕ್ಷಗಾನ ಇಂದಿನ ಜನಾಂಗಕ್ಕೆ ಕೊಡುಗೆಯಾಗಿದೆ. ಧರ್ಮ, ಕಲೆ ಜೀವಂತವಾಗಿರಬೇಕಾದರೆ ಆಶ್ರಯ ಬೇಕು. ಆಶ್ರಯ ಇದ್ದಾಗ ಕಲೆ ಉಳಿಯುತ್ತದೆ. ಕಲೆ, ಕಲಾವಿದನ ಉಳಿವಿಗಾಗಿ ಶ್ಯಾಂಭಟ್ ಶ್ರಮಿಸುತ್ತಿದ್ದಾರೆ ಎಂದರು.
ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಸಂಸ್ಮರಣಾ ಭಾಷಣವನ್ನು ಯಕ್ಷಗಾನದ ಖ್ಯಾತ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಮಾಡಿದರು. ರಜತ ಸಂಭ್ರಮ ಪ್ರಶಸ್ತಿಯನ್ನು ಮಾಜಿ ಅಡ್ವೊಕೇಟ್ ಜನರಲ್ ಡಾ. ಬಿ.ವಿ. ಆಚಾರ್ಯ, ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿ, ನಿಟ್ಟೆ ವಿವಿ ಕುಲಪತಿ ಎನ್. ವಿನಯ ಹೆಗ್ಡೆ, ಯೆನೆಪೋಯ ವಿವಿ ಕುಲಪತಿ ಯೆನೆಪೋಯ ಅಬ್ದುಲ್ ಕುಂಞಿ, ಮಣಿಪಾಲ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಎಚ್ ಸುದರ್ಶನ ಬಲ್ಲಾಳ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ, ಸುಳ್ಯ ಕೆವಿಜಿ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಯಕ್ಷೋತ್ಸವ 2015ರ ಅಭಿನಂದನೆಯನ್ನು ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಡಾ. ನರಸಿಂಹ ಅಡಿಗ, ಸಮ್ಮಾನವನ್ನು ಯಕ್ಷಗಾನದ ಚಾರ್ಲಿಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲ್ ಅವರಿಗೆ ನೀಡಲಾಯಿತು. ಅಭಿನಂದನಾ ಭಾಷಣವನ್ನು ಪ್ರಸಿದ್ಧ ಅರ್ಥಧಾರಿ ವಾಸುದೇವರಂಗಾ ಭಟ್ ಮದೂರು ಮಾಡಿದರು. ಶೇಣಿ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಭಾಗವತ ಅಗರಿ ರಘುರಾಮ ಭಾಗವತರಿಗೆ ನೀಡಿ ಗೌರವಿಸಲಾಯಿತು.
ಅಲ್ಲದೆ ಕಳೆದ 25 ವರ್ಷಗಳಲ್ಲಿ ಭಾಗವಹಿಸಿದ ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆ. ಗೋವಿಂದ ಭಟ್, ಎಂ.ಎಲ್. ಸಾಮಗ, ಪುತ್ತಿಗೆ ರಘರಾಮ ಹೊಳ್ಳ, ಡಾ. ಶ್ರೀಧರ ಭಂಡಾರಿ, ಸಂಪಾಜೆ ಶೀನಪ್ಪ ರೈ, ಕುಂಬ್ಳೆ ಶ್ರೀಧರ್ ರಾವ್, ತಾರಾನಾಥ ವರ್ಕಾಡಿ, ಗಂಗಾಧರ ಸೇಡಿಯಾಪು, ಕೊರಗಪ್ಪ ಮಣಿಯಾಣಿ, ಬಲಿಪ ನಾರಾಯಣ ಭಾಗವತ, ಪದ್ಯಾಣ ಶಂಕರ್ ನಾರಾಯಣ ಭಟ್, ಪದ್ಯಾಣ ಗಣಪತಿ ಭಟ್, ಮಂಟಪ ಪ್ರಭಾಕರ ಉಪಾಧ್ಯಾಯ, ಬಿ.ಸಿ.ರೋಡ್ ಶಿವರಾಮ ಜೋಗಿ, ಉಬರಡ್ಕ ಉಮೇಶ್ ಶೆಟ್ಟಿ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ವಸಂತ ಗೌಡ ಕಾಯರ್ತಡ್ಕ, ದಿವಾಕರ ರೈ ಸಂಪಾಜೆ, ಚಂದ್ರಶೇಖರ್ ರೈ ಸಂಪಾಜೆ ಅವರಿಗೆ ರಜತ ಸಂಭ್ರಮ ಸಮ್ಮಾನ ಮಾಡಿ ಗೌರವಿಸಲಾಯಿತು. ನಿರಂತರ 25 ವರ್ಷಗಳ ಕಾಲ ಯಕ್ಷೋತ್ಸವದ ರೂವಾರಿ ಟಿ. ಶ್ಯಾಮ್ ಭಟ್ ಅವರನ್ನು ಊರವರ ಪರ ಸನ್ಮಾನಿಸಲಾಯಿತು. ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
vijaykarnataka
|
|
|